
ದಾಂಪತ್ಯ ವಿವಾದಗಳ ಬಗ್ಗೆ ಕೇರಳ ಕಾನೂನು ಸೇವಾ ಪ್ರಾಧಿಕಾರದ ವಿಶಿಷ್ಟ ನಡೆ: ನ್ಯಾಯಾಲಯದ ಆಚೆ ವಿವಾದ ಇತ್ಯರ್ಥಕ್ಕೆ ಹೊಸ ವೇದಿಕೆ
ದಾಂಪತ್ಯ ವಿವಾದಗಳ ಬಗ್ಗೆ ಕೇರಳ ಕಾನೂನು ಸೇವಾ ಪ್ರಾಧಿಕಾರದ ವಿಶಿಷ್ಟ ನಡೆ: ನ್ಯಾಯಾಲಯದ ಆಚೆ ವಿವಾದ ಇತ್ಯರ್ಥಕ್ಕೆ ಹೊಸ ವೇದಿಕೆ
ಕೌಟುಂಬಿಕ ನ್ಯಾಯಾಲಯದ ಆಚೆ ವಿವಾದ ಇತ್ಯರ್ಥ ಮಾಡಬಹುದು ಎಂಬ ಬಗ್ಗೆ ಕೇರಳ ಕಾನೂನು ಸೇವಾ ಪ್ರಾಧಿಕಾರದ ವಿಶಿಷ್ಟ ನಡೆಯ ಮೂಲಕ ಗಮನ ಸೆಳೆದಿದೆ.
ದಾಂಪತ್ಯ ವಿವಾದಗಳು, ಕೌಟುಂಬಿಕ ವ್ಯಾಜ್ಯಗಳನ್ನು ಕೋರ್ಟಿನಾಚೆಗೂ ಉಭಯ ಪಕ್ಷಕಾರರಿಗೂ ತೃಪ್ತಿಯಾಗುವಂತೆ ಪ್ರಕರಣಗಳನ್ನು ಮುಕ್ತಾಯಗೊಳಿಸಬಹುದು
ನ್ಯಾಯಾಲಯದ ಹೊರಗೆ ಸೌಹಾರ್ದಯುತವಾಗಿ ಇತ್ಯರ್ಥಗೊಳಿಸುವುದನ್ನು ಪ್ರೋತ್ಸಾಹಿಸುವುದಕ್ಕಾಗಿ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ "ಸಾಮರಸ್ಯ ತಾಣ" (ಹಾರ್ಮನಿ ಹಬ್) ಎಂಬ ವಿಶಿಷ್ಟ ಯೋಜನೆಯನ್ನು ಆರಂಭಿಸಿದೆ.
ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಮುಹಮ್ಮದ್ ಮುಸ್ತಾಕ್ ಅವರು ಈ ಯೋಜನೆಯನ್ನು 2025ರ ಜನವರಿ 15ರಂದು ಲೋಕಾರ್ಪಣೆ ಮಾಡಿದರು.
ಪಕ್ಷಕಾರರಿಗೆ ಸುದೀರ್ಘ ವಿಚಾರಣೆ ಮತ್ತು ದುಬಾರಿ ವೆಚ್ಚದ ವ್ಯಾಜ್ಯಗಳನ್ನು ತಪ್ಪಿಸುವ ಮೂಲಕ ಹಾಗೂ ಪಕ್ಷಿದಾರರ ನಡುವೆ ಸೌಹಾರ್ದಯುತವಾಗಿ ವ್ಯಾಜ್ಯಗಳನ್ನು ಬಗೆಹರಿಸುವ ಮೂಲಕ ನ್ಯಾಯಾಲಯಗಳ ಮೇಲಿನ ಪ್ರಕರಣದ ಬಾಕಿ ಹೊರೆಯನ್ನು ಈ ಸಾಮರಸ್ಯ ತಾಣ ತಗ್ಗಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.
ಆಪ್ತ ಸಮಾಲೋಚನೆ, ಮಧ್ಯಸ್ಥಿಕೆ ಸೇವೆ, ಕಾನೂನು ಮಾರ್ಗದರ್ಶನ, ಅಗತ್ಯವಿದ್ದರೆ ಕಾನೂನು ನೆರವು, ಪಕ್ಷಕಾರರಿಗೆ ಭಾವನಾತ್ಮಕ ಬೆಂಬಲ ಹಾಗೂ ಇತರ ಅಗತ್ಯ ಕ್ಷೇಮ ಕಾರ್ಯಕ್ರಮಗಳನ್ನು ಈ ಯೋಜನೆ ಮೂಲಕ ಉಚಿತವಾಗಿ ನೀಡಲಾಗುತ್ತದೆ.
ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸುವ ಪಕ್ಷಕಾರರು ಈ ಯೋಜನೆಯಡಿ ಸೇವೆ ಪಡೆಯಲು ರಾಜ್ಯದ 14 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಲ್ಲಿ ಯಾವುದೇ ಜಿಲ್ಲೆಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು
ವೈವಾಹಿಕ ಸಂಬಂಧಗಳಷ್ಟೇ ಅಲ್ಲದೆ ಲಿವ್-ಇನ್ ರಿಲೇಶನ್ (ಸಹಜೀವನ)ದಂತಹ ಮದುವೆಯ ಸ್ವರೂಪದಲ್ಲಿನ ಸಂಬಂಧಗಳು ಸಹ ಈ 'ಸಾಮರಸ್ಯ ತಾಣ'ದ ವ್ಯಾಪ್ತಿಗೆ ಬರುತ್ತವೆ. ಈ ಪ್ರಕ್ರಿಯೆಯಲ್ಲಿ ಹಂಚಿಕೊಳ್ಳಲಾಗುವ ಎಲ್ಲಾ ಚರ್ಚೆ ದಾಖಲೆಗಳು ಮತ್ತು ಮಾಹಿತಿ ಕಟ್ಟುನಿಟ್ಟಾಗಿ ರಹಸ್ಯವಾಗಿ ಇಡಲಾಗುತ್ತದೆ
ಒಂದು ವೇಳೆ, ಪಕ್ಷಕಾರರು ತಾವು ಮಾಡುವ ರಾಜಿ ಒಪ್ಪಂದದಲ್ಲಿ ಜಾರಿಗೊಳಿಸಬೇಕಾದ ನಿಯಮವನ್ನು ಹೊಂದಿದ್ದರೆ ಅಂತಹ ಪ್ರಕರಣವನ್ನು ಲೋಕ್ ಅದಾಲತ್ ಮುಂದೆ ಮಂಡಿಸಬಹುದು. ನಂತರ ಅದು ಒಪ್ಪಂದದ ನಿಯಮಗಳ ಆಧಾರದ ಮೇಲೆ ತೀರ್ಪು ನೀಡಲಿದೆ.
ಈ ಪ್ರಕ್ರಿಯೆ ರಾಜಿ ಸಂಧಾನವನ್ನು ಔಪಚಾರಿಕವಾಗಿ ಗುರುತಿಸಲು ಮತ್ತು ಕಾನೂನು ವ್ಯಾಪ್ತಿಯೊಳಗೆ ರೂಪಿಸಲು ಈ ವ್ಯವಸ್ಥೆ ಅನುಮತಿ ನೀಡುತ್ತದೆ. ದೀರ್ಘಾವಧಿಗೆ ಹೋಗಬಹುದಾದ ವ್ಯಾಜ್ಯದ ಅಗತ್ಯವಿಲ್ಲದೆ ರಾಜಿ ಸಂಧಾನ ಪಾಲನೆ ಖಚಿತಪಡಿಸಿಕೊಳ್ಳಲು ಪಕ್ಷಕಾರರಿಗೆ ತ್ವರಿತ ಮತ್ತು ಸುಲಭವಾಗಿ ಸಿಗಬಹುದಾದ ಮಾರ್ಗವನ್ನು ಕಲ್ಪಿಸಿ ಕೊಡುತ್ತದೆ.