
ಬ್ಯಾಂಕ್ ಗ್ರಾಹಕರಿಗೆ ದ್ರೋಹ: ನಕಲಿ ರಶೀದಿ ನೀಡಿ ಹಣ ದುರ್ಬಳಕೆ ಮಾಡಿದ ಸಿಬ್ಬಂದಿ ವಜಾ- ಬ್ಯಾಂಕ್ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ಬ್ಯಾಂಕ್ ಗ್ರಾಹಕರಿಗೆ ದ್ರೋಹ: ನಕಲಿ ರಶೀದಿ ನೀಡಿ ಹಣ ದುರ್ಬಳಕೆ ಮಾಡಿದ ಸಿಬ್ಬಂದಿ ವಜಾ- ಬ್ಯಾಂಕ್ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ಬ್ಯಾಂಕ್ ಗ್ರಾಹಕರಿಗೆ ವಿಶ್ವಾಸಘಾತ ಎಸಗಿ, ತಾನು ನೀಡಿದ ಹಣಕ್ಕೆ ಪ್ರತಿಯಾಗಿ ಅವರಿಗೆ ನಕಲಿ ಎಫ್.ಡಿ. ರಶೀದಿ ನೀಡಿ ಹಣ ದುರ್ಬಳಕೆ ಮಾಡಿದ ಸಿಬ್ಬಂದಿಯನ್ನು ವಜಾ ಮಾಡಿದ ಬ್ಯಾಂಕ್ ಆದೇಶವನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.
ಕೆ. ಸತೀಶ್ ಚಂದ್ರ ಶೆಟ್ಟಿ Vs ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದೂಮ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ವಜಾಗೊಂಡಿದ್ದ ಬ್ಯಾಂಕ್ ಉದ್ಯೋಗಿಯು ತಾನು ಗ್ರಾಹಕನ ಖಾತೆಗೆ ಜಮೆ ಮಾಡಲು ನೀಡಿದ್ದ ಹಣವನ್ನು ದುರುಪಯೋಗ ಮಾಡಿಕೊಂಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಹಾಗಾಗಿ ಬ್ಯಾಂಕ್ ಆತನನ್ನು ವಜಾ ಗೊಳಿಸಿರುವುದು ಸರಿಯಾದ ಆದೇಶವಾಗಿದೆ ಎಂದು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ತೀರ್ಪು ನೀಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ವಿಭಾಗೀಯ ನ್ಯಾಯಪೀಠಕ್ಎಕ ಮೇಲ್ಮನವಿ ಸಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ, ಹೈಕೋರ್ಟ್ನ ಏಕ ಸದಸ್ಯ ಪೀಠದ ತೀರ್ಪು ಸರಿಯಾಗಿ ಇದೆ ಎಂದು ಹೇಳಿದ್ದು, ವಜಾ ಆದೇಶವನ್ನು ಎತ್ತಿ ಹಿಡಿದಿದೆ.
ಬ್ಯಾಂಕಿನ ಗ್ರಾಹಕರು ಬ್ಯಾಂಕಿನ ಸಿಬ್ಬಂದಿಯಿಂದಲೇ ವಂಚನೆಗೊಳಗಾಗುವ ಸಮಸ್ಯೆ ಜಾಗತಿಕ ಪಿಡುಗು ಎಂಬಂತೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಇಂತಹ ಘಟನೆಗಳು ಬ್ಯಾಂಕಿನ ಘನತೆ, ಮತ್ತು ವಿಶ್ವಾಸಾರ್ಹತೆಯ ಮೇಲೆ ಘಾತಕವಾದ ಪೆಟ್ಟು ಕೊಡುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಸಿಬ್ಬಂದಿಯೇ ಹಣಕಾಸು ಸಂಸ್ಥೆಗಳ ವಿಶ್ವಾಸಾರ್ಹತೆಗೆ ಹಾನಿ ಮಾಡುವ ಕೃತ್ಯ ಎಸಗಿರುವುದು ಗಂಭೀರ ಘಟನೆ. ಸಿಬ್ಬಂದಿಯ ಇಂತಹ ವರ್ತನೆಯನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಇಂತಹ ಘಟನೆಗಳು ಸಮಾಜಕ್ಕೆ ಅಪಾಯಕಾರಿಯಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇಂತಹ ಕೃತ್ಯಗಳಲ್ಲಿ ಉದಾರವಾದ ನಿಲುವು ಸಾಧ್ಯವೇ ಇಲ್ಲ ಎಂದು ವಿಭಾಗಿಯ ನ್ಯಾಯಪೀಠ ಹೇಳಿದೆ.
ಪ್ರಕರಣದ ವಿವರ
ಬ್ಯಾಂಕ್ ಸಿಬ್ಬಂದಿಗೆ ಪರಿಚಿತರಾದ ಮಹಿಳಾ ಗ್ರಾಹಕರೊಬ್ಬರಿಗೆ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ತೆರೆಯುವ ನಿಟ್ಟಿನಲ್ಲಿ ಅರ್ಜಿದಾರ ಬ್ಯಾಂಕ್ ಉದ್ಯೋಗಿ ಸಹಾಯ ಮಾಡಿದ್ದರು. ಆ ಬಳಿಕ, ಗ್ರಾಹಕರು ಸಿಬ್ಬಂದಿಯ ಕೈಗೆ ನಗದು ಹಣ ನೀಡಿ ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಹೇಳಿದ್ದರು.
ಆದರೆ, ಈ ಹಣವನ್ನು ಗ್ರಾಹಕರ ಬ್ಯಾಂಕಿಗೆ ಹಾಕದೆ ಬ್ಯಾಂಕ್ ಸಿಬ್ಬಂದಿಯು ಗ್ರಾಹಕರ ಹಣವನ್ನು ತನ್ನ ವೈಯಕ್ತಿಕ ಬಳಕೆಗೆ ಪಡೆದು ದುರ್ಬಳಕೆ ಮಾಡಿಕೊಂಡಿದ್ದರು. ಗ್ರಾಹಕರಿಗೆ ನಕಲಿ ಎಫ್.ಡಿ. ರಶೀದಿಗಳನ್ನೂ ನೀಡಿ ಬ್ಯಾಂಕ್ ಸಿಬ್ಬಂದಿ ವಂಚಿಸಿದ್ದರು.
ಕೆಲ ಸಮಯದ ಬಳಿಕ ಗ್ರಾಹಕರು ಖಾತೆಯಿಂದ ತಮ್ಮ ಹಣವನ್ನು ತೆಗೆಯಲು ಬಂದಾಗ ಈ ವಿಷಯ ಗ್ರಾಹಕರಿಗೆ ಗೊತ್ತಾಗಿ ಅವರು, ಸದ್ರಿ ಬ್ಯಾಂಕಿವ ಉದ್ಯೋಗಿಯ ವಿರುದ್ಧ ದೂರು ನೀಡಿದ್ದರು.
ವಿಚಾರಣೆ ವೇಳೆ ಅರ್ಜಿದಾರ ಬ್ಯಾಂಕ್ ಉದ್ಯೋಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು. ತಾನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದೆ. ಹಾಗಾಗಿ, ತಾನು ಮಹಿಳಾ ಗ್ರಾಹಕರ ಖಾತೆಯಿಂದ ಹಣ ಪಡೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದರು.
ಆಗ, ಸಿಬ್ಬಂದಿಯು ಗ್ರಾಹಕರ ಖಾತೆಗೆ ಹಣ ತುಂಬದೇ ನಕಲಿ ರಸೀದಿಗಳನ್ನು ನೀಡಿರುವ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆತನನ್ನು ಕೆಲಸದಿಂದ ವಜಾಗೊಳಿಸಿತ್ತು. ಈ ವಜಾ ಆದೇಶವನ್ನು ಪ್ರಶ್ನಿಸಿ ಬಾಧಿತ ಬ್ಯಾಂಕ್ ಸಿಬ್ಬಂದಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣ: ಕೆ. ಸತೀಶ್ಚಂದ್ರ ಶೆಟ್ಟಿ Vs ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಕರ್ನಾಟಕ ಹೈಕೋರ್ಟ್, W.A. 952/2021 Dated 15-11-2021