.jpg)
ನೋಂದಣಿ ಪ್ರಕ್ರಿಯೆ ಸ್ಥಗಿತ: ವಕೀಲರ ಸಂಘದ ಆಕ್ರೋಶ, ಕಾನೂನು ಕ್ರಮದ ಎಚ್ಚರಿಕೆ
ನೋಂದಣಿ ಪ್ರಕ್ರಿಯೆ ಸ್ಥಗಿತ: ವಕೀಲರ ಸಂಘದ ಆಕ್ರೋಶ, ಕಾನೂನು ಕ್ರಮದ ಎಚ್ಚರಿಕೆ
ರಾಜ್ಯದಲ್ಲಿ ಕಾವೇರಿ 2.0 ಸಾಫ್ಟ್ವೇರ್ನ ಸಿಟಿಝೆನ್ ಲಾಗಿನ್ ಕಾರ್ಯನಿರ್ವಹಿಸುತ್ತಿಲ್ಲ. ಆ ಕಾರಣ ಕಳೆದ ಶನಿವಾರದಿಂದ ರಾಜ್ಯದಾದ್ಯಂತ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ.
ಈ ಕುರಿತು ರಾಜ್ಯ ಸರ್ಕಾರದ ರಾಜ್ಯ ಕಂದಾಯ ಸಚಿವರು ನಿರ್ಲಕ್ಷ್ಯ ವಹಿಸಿದ್ದು, ಬೇಜವಾಬ್ದಾರಿ ಹೇಳಿಕೆ ನೀಡಿರುತ್ತಾರೆ ಎಂದು ಮಂಗಳೂರು ವಕೀಲರ ಸಂಘ ಆರೋಪಿಸಿದೆ.
ಮುದ್ರಾಂಕ ಇಲಾಖೆಯು ತಂತ್ರಾಂಶದಲ್ಲಿ ಆಗಿರುವ ದೋಷದ ಬಗ್ಗೆ ಹಾಗೂ ಸಮಗ್ರ ತೊಂದರೆಯ ಮೂಲಕಾರಣವನ್ನು ಹುಡುಕುವುದು ಮತ್ತು ಆ ಸಮಸ್ಯೆಗಳಿಗೆ ಪರಿಹಾರದ ಮಾರ್ಗಗಳನ್ನು ಅರಿಯಲು ಪ್ರಯತ್ನಿಸುತ್ತಿದೆ ಎಂದು ಸಂಘ ಹೇಳಿದೆ.
2025ರ ಫೆಬ್ರವರಿ 1ನೇ ತಾರೀಕು ಶನಿವಾರದಿಂದ ಈ ಸಮಸ್ಯೆ ಉಲ್ಬಣಗೊಂಡಿದ್ದು, ಆ ದಿನ ರಾಜ್ಯಾದ್ಯಂತ ಯಾವುದೇ ನೋಂದಣಿ ಸಾಧ್ಯವಾಗಿರುವುದಿಲ್ಲ. 2025ರ ಫೆಬ್ರವರಿ 3ರಿಂದ ಉಪನೋಂದಣಿ ಕಚೇರಿ (SRO) ಲಾಗಿನ್ ಕಾರ್ಯನಿರ್ವಹಿಸುತ್ತಿದೆ. ಆದರೂ, ಸಿಟಿಝೆನ್ ಲಾಗಿನ್ ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ. ಈ ತಾಂತ್ರಿಕ ತೊಂದರೆಯಿಂದ ಸಾರ್ವಜನಿಕರು, ವಕೀಲರು ಹಾಗೂ ನೋಂದಣಿ ಕಚೇರಿಗೆ ಸಂಬಂಧಪಟ್ಟ ಇತರರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಗಂಭೀರ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಸಂಬಂಧಿತ ಇಲಾಖೆ ಹಾಗೂ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಮಂಗಳೂರು ವಕೀಲರ ಸಂಘ ಆಗ್ರಹಿಸಿದೆ.
ಸರ್ಕಾರವು ತಕ್ಷಣ ಕ್ರಮ ಕೈಗೊಂಡು ನಾಗರಿಕ ಲಾಗಿನ್ ಪುನಃ ಚಾಲನೆ ಮಾಡುವ ಬಗ್ಗೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ, ವಕೀಲರ ಸಂಘವು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆಯನ್ನು ನೀಡಿದ್ದಾರೆ.