
ವಿಪರೀತ ಸೆಖೆ: ಕರಿಕೋಟಿಗೆ ವಿನಾಯಿತಿ ನೀಡಿ- ಹೈಕೋರ್ಟ್ ಸಿಜೆಗೆ ವಕೀಲರ ಮನವಿ
ವಿಪರೀತ ಸೆಖೆ: ಕರಿಕೋಟಿಗೆ ವಿನಾಯಿತಿ ನೀಡಿ- ಹೈಕೋರ್ಟ್ ಸಿಜೆಗೆ ವಕೀಲರ ಮನವಿ
ರಾಜ್ಯದಲ್ಲಿ ತಾಪಮಾನ ಏರಿಕೆಯ ಪರಿಣಾಮದಲ್ಲಿ ವಿಪರೀತ ಸೆಖೆಯ ವಾತಾವರಣ ಇದೆ. ಈ ಹಿನ್ನೆಲೆಯಲ್ಲಿ ಕಪ್ಪು ಕೋಟು ಹಾಕಿಕೊಂಡು ಕರ್ತವ್ಯ ನಿರ್ವಹಿಸುವುದು ಕಷ್ಟಕರವಾಗುತ್ತಿದೆ. ಹಾಗಾಗಿ ಕರಿಕೋಟಿಗೆ ವಿನಾಯಿತಿ ನೀಡಬೇಕು ಎಂದು ಬೆಂಗಳೂರು ವಕೀಲರ ಸಂಘ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು ವಕೀಲರ ಸಂಘ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹಾಗೂ ಪದಾಧಿಕಾರಿಗಳು ಸಿಜೆ ಎನ್.ವಿ. ಅಂಜಾರಿಯಾ ಅವರನ್ನು ಭೇಟಿ ಮಾಡಿ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ವಕೀಲರಿಗೆ ಕರಿ ಕೋಟು ಧರಿಸುವುದರಿಂದ ವಿನಾಯಿತಿ ನೀಡಬೇಕು ಎಂದು ಅವರು ಕೋರಿಕಂಡಿದ್ದಾರೆ.
ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಈಗಾಗಲೇ ವಕೀಲರಿಗೆ ಕರಿ ಕೋಟು ಧರಿಸುವಲ್ಲಿ ವಿನಾಯಿತಿ ನೀಡಲಾಗಿದೆ. ಉರಿ ಸೆಖೆ ಮತ್ತು ಬಿಸಿಲ ಬೇಗೆಯಲ್ಲಿ ಕರಿ ಕೋಟು ಹಾಕಿಕೊಂಡು ಅತ್ತಿತ್ತ ಓಡಾಡಲು ವಕೀಲರಿಗೆ ಕಷ್ಟವಾಗುತ್ತಿದೆ. ತಾಪಮಾನ ಇನ್ನಷ್ಟು ಹೆಚ್ಚುತ್ತಿದೆ. ಹಾಗಾಗಿ, ಈ ವಿನಾಯಿತಿ ಅಗತ್ಯವಾಗಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಜಿಲ್ಲಾ ನ್ಯಾಯಾಲಯಗಳಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ ಇಲ್ಲ. ಬಿಳಿ ವಸ್ತ್ರದ ಮೇಲೆ ಕರಿಕೋಟು ಧರಿಸುವುದು ಕಷ್ಟ. ಹಾಗಾಗಿ, ಬೇಸಿಗೆ ರಜೆ ಮುಗಿದು ಕೋರ್ಟ್ ಪುನಾರಂಭಗೊಳ್ಳುವವರೆಗೆ ಈ ವಿನಾಯಿತಿ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.