
ಕೋರ್ಟ್ ಕಲಾಪದಲ್ಲಿ ಕರಿಕೋಟ್ಗೆ ವಿನಾಯಿತಿ: ಬಿಸಿಲ ಬೇಗೆಗೆ ಬಳಲಿದ ವಕೀಲರಿಗೆ ಕರ್ನಾಟಕ ಹೈಕೋರ್ಟ್ ರಿಲೀಫ್
ಕೋರ್ಟ್ ಕಲಾಪದಲ್ಲಿ ಕರಿಕೋಟ್ಗೆ ವಿನಾಯಿತಿ: ಬಿಸಿಲ ಬೇಗೆಗೆ ಬಳಲಿದ ವಕೀಲರಿಗೆ ಕರ್ನಾಟಕ ಹೈಕೋರ್ಟ್ ರಿಲೀಫ್
ಕರ್ನಾಟಕ ರಾಜ್ಯದಲ್ಲಿ ಬಿಸಿಲ ಬೇಗೆಗೆ ಬಳಲಿದ ವಕೀಲರಿಗೆ ಕರ್ನಾಟಕ ಹೈಕೋರ್ಟ್ ದೊಡ್ಡ ರಿಲೀಫ್ ನೀಡಿದ್ದು, ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಕೋರ್ಟ್ ಕಲಾಪದಲ್ಲಿ ಭಾಗವಹಿಸುವ ವಕೀಲರಿಗೆ ಕರಿಕೋಟ್ ಧರಿಸುವುದಕ್ಕೆ ವಿನಾಯಿತಿ ನೀಡಿದೆ.
12-03-2025ರಂದು ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಕರ್ನಾಟಕ ಹೈಕೋರ್ಟ್, ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯಗಳು ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುವ ವಕೀಲರಿಗೆ ಈ ಆದೇಶ ಅನ್ವಯವಾಗಲಿದೆ ಎಂದು ಹೇಳಿದೆ.
ಮಾರ್ಚ್ 15, 2025ರಿಂದ ಮೇ 31, 2025ರ ವರೆಗೆ ವಕೀಲರು ಕರಿ ಕೋಟು ಧರಿಸದೆ ಕೋರ್ಟ್ ಕಲಾಪಕ್ಕೆ ಹಾಜರಾಗಲು ಅನುಮತಿ ನೀಡಿದೆ. ಆದರೆ, ಕರಿಕೋಟು ಹೊರತುಪಡಿಸಿದಂತೆ ಉಳಿದ ವಸ್ತ್ರ ಸಂಹಿತೆಯಲ್ಲಿ ಯಾವುದೇ ರಿಯಾಯಿತಿ ಇಲ್ಲ ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ.
ಬಿಳಿ ಶರ್ಟ್ ಮತ್ತು ವೈಟ್ ಬ್ಯಾಂಡ್ ಧರಿಸಿ ವಕೀಲರು ಕೋರ್ಟ್ ಕಲಾಪದಲ್ಲಿ ಭಾಗವಹಿಸತಕ್ಕದ್ದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಮಾರ್ಚ್ 3 ಮತ್ತು 4ರಂದು ಬೆಂಗಳೂರು ವಕೀಲರ ಸಂಘ ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮಾಡಿದ ಮನವಿಯನ್ನು ಪರಿಗಣಿಸಿ ಹೈಕೋರ್ಟ್ ಈ ನಿರ್ಧಾರ ಕೈಗೊಂಡಿದ್ದು, 12-03-2025ರಂದು ಈ ಬಗ್ಗೆ ಸುತ್ತೋಲೆ ಹೊರಡಿಸಿದೆ.
ಬಿಸಿಲ ಬೇಗೆಯಿಂದ ತತ್ತರಿಸಿದ ವಕೀಲರ ಸಮುದಾಯಕ್ಕೆ ಕರ್ನಾಟಕ ಹೈಕೋರ್ಟ್ನ ಈ ಸುತ್ತೋಲೆ ಒಂದು ದೊಡ್ಡ ಸಮಾಧಾನವನ್ನು ತಂದಿದೆ.