
ವಿಚಾರಣೆ ನೆಪದಲ್ಲಿ ಕಿರುಕುಳ: ಬೆತ್ತಲೆಗೊಳಿಸಿ ವಕೀಲೆ ಜೀವಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಡಿವೈಎಸ್ಪಿ ಕನಕಲಕ್ಷ್ಮಿ ಬಂಧನ, ಪರಪ್ಪನ ಅಗ್ರಹಾರದ ಜೈಲಿಗೆ
ವಿಚಾರಣೆ ನೆಪದಲ್ಲಿ ಕಿರುಕುಳ: ಬೆತ್ತಲೆಗೊಳಿಸಿ ವಕೀಲೆ ಜೀವಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಡಿವೈಎಸ್ಪಿ ಕನಕಲಕ್ಷ್ಮಿ ಬಂಧನ, ಪರಪ್ಪನ ಅಗ್ರಹಾರದ ಜೈಲಿಗೆ
ವಕೀಲೆ, ಉದ್ಯಮಿ ಎಸ್ ಜೀವಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿ ಅವರ ಸಾವಿಗೆ ಕಾರಣವಾಗಿದ್ದ ಆರೋಪದಲ್ಲಿ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿ ಅವರನ್ನು ಬಂಧನ ಮಾಡಲಾಗಿದೆ.
ಎಸ್ಐಟಿ ಮುಖ್ಯ ತನಿಖಾಧಿಕಾರಿ ಸುಧೀರ್ ಎಂ. ಹೆಗಡೆ ಅವರ ನೇತೃತ್ವದ ಪೊಲೀಸರ ತಂಡ ಆರೋಪಿ ಕನಕಲಕ್ಷ್ಮಿಯನ್ನು ಬಂಧಿಸಿದ್ದು, ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪರಪ್ಪನ ಅಗ್ರಹಾರದ ಜೈಲಿಗೆ ಕಳುಹಿಸಲಾಗಿದೆ.
ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಿರುವುದು ದೃಢ ಪಟ್ಟಿದೆ. ವಕೀಲರಾದ ಎಸ್. ಜೀವಾ ಅವರನ್ನು ಬೆತ್ತಲೆಗೊಳಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಬಗ್ಗೆ ಕನಕಲಕ್ಷ್ಮಿ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳು ಇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೋವಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣದ ತನಿಖಾಧಿಕಾರಿಯಾಗಿದ್ದ ಕನಕಲಕ್ಷ್ಮಿ ವಿಚಾರಣೆ ನೆಪದಲ್ಲಿ ಜೀವಾ ಅವರನ್ನು ಅವಾಚ್ಯವಾಗಿ ನಿಂದಿಸಿ ಮಾನಸಿಕ ಆಘಾತ ನೀಡಿದ್ದರು. ಐದು ದಿನ ವಿಚಾರಣೆ ನಡೆಸಿದ್ದರೂ ಜೀವಾ ಹೇಳಿಕೆ ದಾಖಲಿಸದ ವೈಫಲ್ಯ, ಜೀವಾ ಆತ್ಮಹತ್ಯೆ ಬಳಿಕ ದೂರುದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿರುವ ಬಗ್ಗೆ ಪ್ರಬಲ ಸಾಕ್ಷ್ಯಾಧಾರಗಳು ಮತ್ತು ತನಿಖಾ ವರದಿಯ ರಿಮ್ಯಾಂಡ್ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.
ತನಿಖೆ ಸಲುವಾಗಿ 2024ರ ನವೆಂಬರ್ 14ರಂದು ಸಿಐಡಿ ಕಚೇರಿಗೆ ಜೀವಾ ಅವರನ್ನು ಕರೆಸಿಕೊಂಡಿದ್ದ ಕನಕಲಕ್ಷ್ಮಿ ಜೀವಾ ಅವರ ಒಳ ಉಡುಪು ತೆಗಿಸಿ ವಿವಸ್ತ್ರಗೊಳಿಸಿದ್ದರು. ಬೆನ್ನಿನ ಮೇಲೆ ಹಲ್ಲೆ ನಡೆಸಿದ್ದರು. ಸೈನೈಡ್ ತಂದಿದ್ದೀಯಾ ಎಂದು ಹೀಯಾಳಿಸಿ ಹಿಂಸೆ ನೀಡಿದ್ದರು ಎಂದು ಅವರು ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದರು.
ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದ ಕನಕಲಕ್ಷ್ಮಿ ವಿಚಾರಣೆ ವೇಳೆ ಆಗಾಗ ವೀಡಿಯೋ ರೆಕಾರ್ಡ್ ಆಫ್ ಮಾಡಿ ನಿಂದಿಸುತ್ತಿದ್ದರು. ಹಲವು ಬಾರಿ ನಿಂದಿಸಿರುವುದು ಮತ್ತು ಇನ್ನೂ ನಾಲ್ಕು ಕೇಸ್ಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರು. ಈ ಕುರಿತ ವೀಡಿಯೋ ತುಣುಕುಗಳು ಕನಕಲಕ್ಷ್ಮಿ ಅವರ ಮೊಬೈಲ್ನಲ್ಲಿ ಸಿಕ್ಕಿವೆ ಎಂದು ಎಸ್ಐಟಿ ನ್ಯಾಯಾಲಯಕ್ಕೆ ತಿಳಿಸಿದೆ.
ಕನಕಲಕ್ಷ್ಮಿ ನನ್ನ ಅಕ್ಕ, ವಕೀಲರಾದ ಜೀವಾ ಅವರನ್ನು ನಗ್ನಗೊಳಿಸಿ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾರೆ ಎಂದು ತಂಗಿ ಸಂಗೀತಾ ನೀಡಿದ್ದ ದೂರಿನಲ್ಲಿ ಉಲ್ಲೇಖಿಸಿದ್ದರು. ಅಲ್ಲದೆ, 25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ, ಜೀವಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕನಕಲಕ್ಷ್ಮಿ ಅವರೇ ನೇರ ಕಾರಣ ಎಂದು ಸಂಗೀತಾ ಆರೋಪಿಸಿದ್ದರು.
ಈ ಆರೋಪದ ಬಗ್ಗೆ ಬನಶಂಕತಿ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಕನಕಲಕ್ಷ್ಮಿ ವಿರುದ್ಧ ದೂರು ದಾಖಲಾಗಿತ್ತು. ಆತ್ಮಹತ್ಯೆಗೆ ಪ್ರಚೋದನೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಪ್ರಕರಣವನ್ನು ಹೈಕೋರ್ಟ್ ಆದೇಶದ ಪ್ರಕಾರ ಮೂವರು ಐಪಿಎಸ್ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಎಸ್ಐಟಿ ತನಿಖೆ ನಡೆಸುತ್ತಿದೆ.